ಪ್ರಶಸ್ತಿಯ ಹಿಂದಿನ ನೋವು 
ಕ್ಲಿಕ್ ಮಾಡುವ ಎಲ್ಲರೂ ಓದಲೇಬೇಕಾದ ವಿಷಯ

-

ಈ ಕೆಳಗೆ ತೋರಿಸಿದ ಚಿತ್ರ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದ ಹೆಸರು ’ರಣಹದ್ದು ಮತ್ತು ಪುಟ್ಟ ಹೆಣ್ಣುಮಗು’ (Starving Child And Vulture). ಈ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಕೆವಿನ್ ಕಾರ್ಟರ್.

-

ಮೂಲತ: ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕೆವಿನ್ ಕಾರ್ಟರ್ ಈ ಚಿತ್ರದಿಂದ ಜಗತ್ ಪ್ರಸಿದ್ಧಿಯನ್ನು ಪಡೆದ. 1993 ರಲ್ಲಿ ಸುಡಾನ್ ನಲ್ಲಿ ಎರಡನೇ ಸಿವಿಲ್ ವಾರ್ ಜರುಗಿತು. ಆ ಸಂದರ್ಭದಲ್ಲಿ ಸುಡಾನಿನ ಜನ ತಡೆಯಲಾಗದ ಹಸಿವಿನಿಂದ ಗುಳೇ ಹೊರಟರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಛಾಯಾಗ್ರಾಹಕನಾಗಿದ್ದ ಕೆವಿನ್ ಈ ಮಗುವಿನ ಚಿತ್ರ ಕ್ಲಿಕ್ಕಿಸಿದ. ವಿವಿಧ ದೇಶಗಳಿಂದ ಕಳಿಸಲ್ಪಡುವ ಆಹಾರಕ್ಕಾಗಿ ಜನ ಬಡಿದಾಡುವಾಗ ಈ ಮಗುವನ್ನು ಬಿಟ್ಟು ಹೋಗಿದ್ದರು. ಹಸಿವನ್ನು ತಾಳದೇ ಈ ಮಗು ಅನಾಥವಾಗಿ ತನ್ನ ಮೊಳಕಾಲನ್ನು ಊರಿ ನೆಲಕ್ಕೆ ಕುಸಿದ ದಾರುಣ ಚಿತ್ರ. ಕೆವಿನ್ ಚಿತ್ರ ತೆಗೆಯುವಾಗಲೇ ಹಿಂದೆ ರಣಹದ್ದು ಬಂತು. ಇದನ್ನೂ ಕೆವಿನ್ ಕ್ಲಿಕ್ಕಿಸಿದ.

-

ಅದ್ಭುತವಾದ ಚಿತ್ರ ಸೆರೆ ಹಿಡಿದ ಆವೇಶದಲ್ಲಿ ಕೆವಿನ್ ಆ ಚಿತ್ರವನ್ನು ಆಗಿನ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಮಾರಾಟ ಮಾಡುತ್ತಾನೆ. 1993ರಲ್ಲಿ ಈ ಚಿತ್ರ ಅಚ್ಚಾಗಿ ಬೆಳಗಾಗುವುದರಲ್ಲಿ ನೂರಾರು ಪತ್ರಿಕೆಗಳಲ್ಲಿ ಈ ಚಿತ್ರ ಪ್ರಕಟಗೊಳ್ಳುತ್ತದೆ. ಸುಡಾನಿನ ಹಸಿವಿನ ಕ್ಷಾಮದ ದಾರುಣತೆ ಇದೊಂದೇ ಚಿತ್ರ ಹೇಳುತ್ತದೆ ಎಂಬಂತೆ ಚಿತ್ರ ಅಚ್ಚಾಯಿತು. ಮಗು ಆಹಾರವಿಲ್ಲದ ಒದ್ದಾಡುತ್ತಿರುವ ದಾರುಣತೆ, ಅಷ್ಟೇ ಘೋರವಾದದ್ದು ಮಗುವಿನ ಸಾವನ್ನು ಕಾಯುತ್ತಿರುವ ರಣಹದ್ದು ಇಡೀ ಚಿತ್ರ ಭೀಕರತೆಯನ್ನು ಬಿಂಬಿಸುವಂತಿತ್ತು. ಈ ಚಿತ್ರಕ್ಕಾಗಿ ಕೆವಿನ್ ಗೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸಿ ದೊರೆಯುತ್ತದೆ.

-

ಚಿತ್ರ ಪ್ರಕಟವಾದ ನಂತರ ಓದುಗರ ಪತ್ರಿಕೆಗೆ ದುಂಬಾಲು ಬೀಳುತ್ತಾರೆ. ಚಿತ್ರ ಕ್ಲಿಕ್ಕಿಸಿದ ನಂತರ ಈ ಮಗುವನ್ನು ರಕ್ಷಿಸಲಾಯಿತೇ ? ಎಂದು. ಈ ಕುರಿತು ಪತ್ರಿಕೆಯವರಿಗೆ ಏನೂ ಗೊತ್ತಿರುವುದಿಲ್ಲ. ಆದರೆ ದುರಂತವೆಂದರೆ ಕೆವಿನ್ ರಣಹದ್ದನ್ನು ಓಡಿಸಿರುತ್ತಾನೆಯೇ ಹೊರತು ಮಗುವನ್ನು ರಕ್ಷಿಸಿರುವುದಿಲ್ಲ. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಮಾನವೀಯತೆಯನ್ನು ಬದಿಗೊತ್ತಿ ಚಿತ್ರ ಪ್ರಶಸ್ತಿಯನ್ನು ಪಡೆದಿದೆ ಎಂಬ ಆರೋಪಗಳು ಕೇಳಿಬರುತ್ತವೆ. ಒಬ್ಬ ಛಾಯಾಗ್ರಾಹಕ ಮೊದಲು ಮಾನವೀಯತೆಯನ್ನು ಮೆರೆಯಬೇಕೇ ಹೊರತು ತನ್ನ ಅತ್ಯುತ್ತಮ ಚಿತ್ರಕ್ಕಾಗಿ ಅಲ್ಲ ಎಂದು ಜನರು ಟೀಕಿಸುತ್ತಾರೆ. ಇದರಿಂದ ಕೆವಿನ್ ಗೆ ತುಂಬ ಆಘಾತವಾಗುತ್ತದೆ. ಇದೇ ಕೊರಗಿನಲ್ಲಿಯೇ ಕೆವಿನ್ ಪ್ರಶಸ್ತಿ ಪಡೆದ ಕೇವಲ 4 ತಿಂಗಳಲ್ಲಿ ತೀವ್ರವಾದ ಮಾನಸಿಕ ಆಘಾತದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕೆವಿನ ಆತ್ಮಹತ್ಯೆ ಮಾಡಿಕೊಂಡಾಗ ಆತನ ವಯಸ್ಸು ಕೇವಲ 33 ವರ್ಷ ಮಾತ್ರ.

-

ಇತ್ತ ಈ ಮಗುವಿನ ಕತೆ ಏನಾಯ್ತೆಂದರೆ. ಮಗುವೇನೋ ಬೇರೆಯವರಿಂದ ರಕ್ಷಿಸಲ್ಪಡುತ್ತದೆ, ಶಿಬಿರಕ್ಕೆ ಕರೆದೊಯ್ದು ಉಪಚರಿಸಲಾಗುತ್ತದೆ. ಆದರೆ ಮುಂದೆ ಕೆಲವು ವರ್ಷಗಳ ನಂತರ ವಿವಿಧ ಕಾರಣಗಳಿಂದ ಆ ಮಗು ಸಾವಿಗೀಡಾಗುತ್ತದೆ.

-

ಇದರಿಂದ ತಿಳಿದುಕೊಳ್ಳಬೇಕಾದುದೇನೆಂದರೆ, ಮುಖ್ಯವಾಗಿ ಟಿವಿಗಳಲ್ಲಿ ಮೊದಲು ನನ್ನ ವರದಿ ಬರಬೇಕು, ನಾನು ತೆಗೆದ ಫೋಟೊ ಪ್ರಸಾರವಾಗಬೇಕೆಂಬ ಹುಚ್ಚಿನಿಂದ ಅಪಘಾತ ಫೋಟೊಗಳನ್ನು ಕ್ಲಿಕ್ಕಿಸುವ ಹುಚ್ಚು ಇರುವ ಜನರು ಅರಿತುಕೊಳ್ಳಬೇಕಾದುದು ಫೋಟೊಕ್ಕಿಂತ ಮಾನವೀಯತೆ ಮುಖ್ಯ ಎಂಬುದು. ಪ್ರಾಣಿ, ಪಕ್ಷಿಗಳ ಫೋಟೊ ಕ್ಲಿಕ್ಕಿಸುವವರಿಗೂ ಇದು ಅನ್ವಯಿಸುತ್ತದೆ.

-

ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗದಂತೆ ಅವುಗಳು ಅವುಗಳಿರುವ ಜಾಗದಲ್ಲೇ ಅವುಗಳ ಭಂಗಿಗಳನ್ನು ಕ್ಲಿಕ್ಕಿಸುವುದು ಬೇರೆ, ಉದ್ದೇಶಪೂರ್ವಕವಾಗಿಯೇ ಅವುಗಳಿಗೆ ತೊಂದರೆ ನೀಡುತ್ತ, ಹಿಂಸೆ ನೀಡುವ ರೀತಿಯಲ್ಲಿ ಕ್ಲಿಕ್ಕಿಸುವುದು ಬೇರೆ. ಈ ರೀತಿ ಎಂದಿಗೂ ಮಾಡಕೂಡದು.

-

ಏನೇ ಇರಲಿ ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗಿಂತಲೂ ದೊಡ್ಡದು ದಯಾಗುಣ ಒಳ್ಳೆಯದೆಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು.

ಈ ಚಿತ್ರ ನಮಗೆಲ್ಲ ಒಂದು ದೊಡ್ಡ ಪಾಠ.

-

ಆಕರ : ಅಂತರ್ಜಾಲದಿಂದ




Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

How to be happy in these days?